Sunday, June 23, 2013



ಅರ್ಥಕಾಣದ ಘಳಿಗೆ!

ಜೋಪಡಿಯೊಳಗಿನ                                               
ಅರ್ಧಬೆಂದ ಅನ್ನ-
ತುಂಬಿದ ಕಡಾಯಿ
ತುಸುದೂರ ಮಲಗಿದ್ದ
ಬರಿಮೈಯ ದೇಹ-
ವೆರಗಿ ಬಂದಂತಿತ್ತು
ಜೋಪಡಿಯಾಕೆಯ ಕಣ್ಮುಂದೆ
ಅನ್ನದೇಹವೆರಡೂ
ಬೇಯುವ ಕತ್ತಲ ಘಳಿಗೆ
ಉರಿದುರಿದು ಸುಸ್ತಾದ           
ಕೆಂಡದಕಿಡಿ ಬೆಳಕು

ಬೆಂದ ಅನ್ನದ ಘಾಟು
ಮೈಯ ಬೆವರಿನ ಸೊಗಡು
ಸೆರಗ ಸವರುವ ಮೊದಲು
ಬರಿ ಬೂದಿಯ ಗೌಳು
ಊದಿ ಊದಿ ನಂದಿಸಲು

ಜೋಪಡಿಹೊರಗೆ
ಗಾಳಿ ತಂಪನೆ ಬೀಸು
ಒಳಗೆಳೆದುಹೋದಂತೆ
ಅರ್ಧ ಉಸಿರಿನ ಮೌನ
ರಾಗ ಸಂಯೋಜನೆಯಲ್ಲ
ತಟ್ಟೆಗನ್ನ ಬೀಳುವ ಶಬ್ಧ
ನಗೆಮರೆತ ಚಿತ್ತಾರ
ತನ್ನೊಳಗೆ ತಾಬೆರೆತು
ಕೈತುತ್ತು ಕೊಡುತಿರಲು
ಮುಳುಗಿದ್ದ ಸೂರ್ಯ
ಚಂದ್ರ ಮೇಲೇಳಲೇ ಇಲ್ಲ

ಹಸಿದ ಕತ್ತಲೆ ತಾನು
ತನ್ನನ್ನೇ ಮರೆತಿರಲು
ಅನ್ನ ತಣಿದಿತ್ತು
ಬಿಸಿಯುಸಿರು ಬಡಿದಿರಲು
ಅರ್ಧ ಬಾಗಿಲ ತೆರೆದು
ಗಾಳಿ ತಾ ನಿಂತಿತ್ತು                                                
                                             -- 05-06-2013

Wednesday, May 8, 2013



ಅನ್ನಕದ್ದ ಮುದುಕಿ….

ಸಾಯಲು ಬಿದ್ದ ಮುದುಕಿ
ಹಸುಗೂಸಿಗಿಟ್ಟಿದ್ದ ಅನ್ನ ಕದ್ದಿದ್ದು
ಅಕ್ಕಿ ಮೇಲಿನ ಆಸೆಗಲ್ಲ
ಕೂಸೇನೂ ಆಕೆಗೆ ವೈರಿಯಲ್ಲ
ಆಕೆ ತಿಂದಿದ್ದು ಹಸಿದ ಹೊಟ್ಟೆಗಾಗಿ
ಕುಂಟುತ್ತ ನಡೆವ ಕಾಲಿಗಾಗಿ
ಬೇಡಲೊಲ್ಲದ ಎರಡು ಕೈಗಾಗಿ
ಬಗ್ಗಲಿಚ್ಛಿಸದ ಬೆಂಡು ಬೆನ್ನಿಗಾಗಿ

ಮುದುಕಿಯ ಒಂದು ದಿನ
ಕೂಸಿಗೂ ಒಂದೇ ದಿನ
ಕೂಸಿಗೆ ನಿನ್ನೆ ಬಿದ್ದ ಕನಸು
ಮುದುಕಿಯ ಕಳೆದ ಕಾಲದ ನೆನಪು
ಕೂಸು ಕಾಣಲಿದ್ದ ಜಗತ್ತು
ಮುದುಕಿ ಕಂಡಿದ್ದಕ್ಕಿಂತ ಬೇರಲ್ಲ
ಇದ್ದರಿರಬಹುದು ವ್ಯತ್ಯಾಸ
ನಗು ತುಂಬಿದ ಮುದ್ದು ಮುಖ
ನೆರಿಗೆ ಕಾಂಬ ಹಳೆಯ ಮುಖ

ನಾಳೆಗಿದೆ ಊರತೀರ್ಪು
ಅನ್ನಕದ್ದ ಮುದುಕಿಗೇನು ಶಿಕ್ಷೆ
ನೀವೇ ಹೇಳಿ, ಆಕೆಗೇನು ಶಿಕ್ಷೆ?

ಬದುಕಲಿಚ್ಛಿಸುವಿಕೆಗೆ ಯಾವ ಹಂಗಿಲ್ಲ
ಬೇಲಿ ಹಾಕಿ ಯಾರೂ ಬಂಧಿಸಿಲ್ಲ                         
ಹಸಿವ ಬದುಕ ಬೆವರ                                    



                                        -- 08-05-2013

Friday, March 15, 2013

ಕವನ


ಅಕಾಲ ಪ್ರೀತಿ

ನಾ ಕದ್ದ ಕವನದಂತೆ
ಅವರ ಪ್ರೀತಿ ಅಕಾಲದಲಿ ಮೊಳೆತಿದೆ
ಬಿಟ್ಟ ಬೇರು ಹಿಡಿದಿಟ್ಟಿದೆ
ನೆಲವ ಬಿಟ್ಟು ಬೇರಾಗದಂತೆ
ಬೇರಿಗೆ ಮತ್ತಷ್ಟು ಬೇರು ಬಿಟ್ಟು
ರೆಂಬೆಯ ಮೇಲಷ್ಟು ರೆಂಬೆ ಬೆಳೆದಿದೆ
ಕನಸಲ್ಲಿ ಕನಸು ಬಿದ್ದು
ಮನಸು ಮುರಿದ ಮನೆಯಾಗಿದೆ
ಬೆಳೆದ ರೆಂಬೆಗೆ ಮೋಡ ಕಾಣಲು
ಬಲಿತ ಬೇರಿಗೆ ನೀರು ಸಿಕ್ಕಿದೆ
ಅವರ ಪ್ರೀತಿ ಅಕಾಲದಲ್ಲಿ ಮೊಳೆತಿದ್ದು
ನಾ ಕದ್ದ ಕವನದಂತೆ
ದೇಹ ಬಾಡಿಗೆಗೆ ಸಿಗುವಂತೆ
ಕಣ್ಣಲ್ಲಿ ಕಣ್ಣಿಟ್ಟು ನೋಡದವರಿಗೆ
ಪ್ರೀತಿಯ ಕತ್ತಿಗೆ ಕುಣಿಕೆ ಬಿಗಿದು
ನೆತ್ತಿಗೆ ಮುತ್ತಿಟ್ಟು ಮುದ್ದಾಡಬಹುದೆ
ಎಲೆಯೆಲ್ಲ ಬಿರು-ಗಾಳಿಗೆ ಸಿಲುಕಿರೆ
ರೆಂಬೆ ತಾನು ನೃತ್ಯಗೈದಿದೆ
ನೆರೆಬಂದು ಮಣ್ಣೆಲ್ಲ ಕೊಚ್ಚಿಹೋದರೂ
ಬೇರು ನಿಂತ ನೀರ ಹೀರಿದೆ
ಅಕಾಲದಲ್ಲಿ ಮೊಳೆವ ಪ್ರೀತಿ
ಕದ್ದ ಕವನದಂತೆ
ಬೆಳೆದು ಮೇಲೆದ್ದರೂ ಬದುಕುವುದಿಲ್ಲ
ಬದುಕಿದರೂ ಅದು ಬದುಕಲ್ಲ


                                   ----  13-03-2013

Saturday, August 18, 2012

ಕವನ


ಪಯಣಕ್ಕೆ ಬರಿಯ ಪಯಣಕ್ಕೆ


ತಕ್ಕಡಿ ತಿಮ್ಮಪ್ಪ
ಎಂಟಾಣೆಯಜ್ಜ
ರೂಪಾಯಿಗೆ ಹೆಚ್ಚಿಲ್ಲ
ನಾಲ್ಕಾಣೆಗೆ ಕಮ್ಮಿಲ್ಲ

ಬಡಿಸಿಟ್ಟ ಅನ್ನವನುಂಡು
ಬಿಡಿಸಿಟ್ಟ ಗೋಣಿಯ ಹೊದ್ದು
ಕಂಡಲ್ಲಿ ಮಲಗುವ ತಕ್ಕಡಿ ತಿಮ್ಮಪ್ಪ
ಬೆಳಗಾದರೆ ಎದ್ದು ಹೊರಡುವುದು
ಪಯಣಕ್ಕೆ ಬರಿಯ ಪಯಣಕ್ಕೆ

“ಯಾವನಿವ ಬಡ್ಡೀಮಗ
ದೇವೀ ಪಕ್ಕ ಮಲ್ಕೊಂಡನ”
ಬೊಬ್ಬಿಟ್ಟ ಪೂಜಾರಿಯ ನೋಡಿ
ನಸುನಕ್ಕು ಎದ್ದುಕೊಂಡು
“ಬ್ಯಾಸರಿಸ್ಕೋ ಬ್ಯಾಡ್ರೀ ಸ್ವಾಮ್ಯಾರ,
ತಂಪಿತ್ರೀ, ಎಚ್ಚರಾನೇ ಆಗಿಲ್ರೀ
ದೇವಿಗೊಂದು ನಮಸ್ಕಾರ ಹಾಕಿ
ಜಾಗ ಖಾಲೇ ಮಾಡ್ತೇನ್ರೀ”

ಒಂದಕ್ಷರ ಕಲಿಯದವ
ಕಂಡ ಗಾಡಿಯನೇರುವವ
“ಸಾಹೇಬ್ರ, ಎರಡ್ ರೂಪಾಯಿ ತಗೊಳ್ರೀ
ಟಿಕೇಟು ನೀವೇ ಇಟ್ಕೊಳ್ರಿ”
ಇಳಿಸಿದಲ್ಲಿಳಿದು ಮುಂದಡಿಯನಿಡುವ
ತಕ್ಕಡಿ ತಿಮ್ಮಪ್ಪ ಹೊರಡಲಣಿಯಾಗುವುದು
ಪಯಣಕ್ಕೆ ಬರಿಯ ಪಯಣಕ್ಕೆ

“ಹಳೀ ಕಬ್ಣಾರೀ, ಹಳೀ ಪಾತ್ರಾರಿ”
ನೆನೆದಷ್ಟೂ ಬೇಸರಗೊಂಡು
ತಕ್ಕಡಿ ತೂಗಿದ ಕೈಯೀಗ
ಬುಡಬುಡಕಿ ಹಿಡಿದು
“ಅಣ್ಣಾ,ತಂಗೀ,ತಾಯೀ,ತಂದಿ
ಇಲ್ಲೈತ್ರಿ ನಿಮ್ ಭವಿಷ್ಯಾ
ನಿಮ್ಮಾಣಿಗೂ ನಾನೇಳೋದ್ ಸತ್ಯ
ಎಂಟಾಣಿ ಕೊಟ್ಟು ಬಾಳ್ರಿ ನೂರ್ವರ್ಷ”
ಕೊಟ್ಟಿದ್ದ ಕಟ್ಕೊಂಡು
ಮುಂದಡಿಯಿಟ್ಟ ತಕ್ಕಡಿ ತಿಮ್ಮಪ್ಪ
ಪಯಣಕ್ಕೆ ಬರಿಯ ಪಯಣಕ್ಕೆ.

ಆಗ ತಕ್ಕಡಿ ತಿಮ್ಮಪ್ಪ
ಈಗ ಎಂಟಾಣೆಯಜ್ಜ
ರೂಪಾಯಿಗೆ ಹೆಚ್ಚಿಲ್ಲ
ನಾಲ್ಕಾಣೆಗೆ ಕಮ್ಮಿಲ್ಲ

“ಎಲ್ಲಾವ್ರೀ ನಿಮ್ ಮನೀ ಮಠಾ?”
ಮನಿಯೊಡತಿ ಕೇಳಿದ್ದ ಕೇಳಿ
“ಅವೆಲ್ಲಾ ಕಥೀ ಬಾಳಾನೇ ಅದಾವ್ರೀ,
ಈ ನೆಲಾನೇ ಒಂದ್ ಮಠಾರೀ,
ನಾ ಮಲಗಿದ್ದೇ ನನ್ ಮನೀರಿ "
ಹೊರಟುನಿಂತ ತಕ್ಕಡಿ ತಿಮ್ಮಪ್ಪ
ಊರುವ ಕೋಲನು ಕೈಯಲಿ ಹಿಡಿದು
ವಸಡಿನ ಬಾಯಲಿ ಕವಳವ ಜಗೆದು
ಪಯಣಕ್ಕೆ ಬರಿಗಾಲ ಪಯಣಕ್ಕೆ!
*****
                                          --- 18-08-2012

Monday, July 9, 2012

ನನ್ನವೆಲ್ಲ ನನ್ನ ಮಾತ್ರದ್ದಲ್ಲ


“ನನ್ನವೆಲ್ಲ ನನ್ನ ಮಾತ್ರದ್ದಲ್ಲ”


ನನ್ನ ಕರ್ಮಠಗಳ ಗಂಟಿನ್ನೂ
ಭದ್ರವಾಗಿಯೇ ಕೂತಿದೆ
ಬೀರೂವಿನ ಮಧ್ಯಮೂಲೆಯಲ್ಲಿ
ಕೈ ಹಾಕಿ ತೆಗೆಯುವುದಿಲ್ಲ
ನನ್ನ ಸ್ವತ್ತೆಂಬ ಮಾತ್ರಕ್ಕೆ
ಎಲ್ಲ ನನ್ನದಾಗುವುದಿಲ್ಲ!

ನಾ ನೋಡಿದ್ದು, ನಾ ಕೇಳಿದ್ದು
ನನ್ನ ಮಾತ್ರದ್ದಲ್ಲ.
ನಾ ಮಾಡಿದ್ದು, ನಾ ಹೇಳಿದ್ದು
ನನಗಷ್ಟೇ ಸೇರಿಲ್ಲ.

ಅವೆಲ್ಲ ನಕ್ಷತ್ರಗಳು ಹುಟ್ಟಿ
ತಮಗರಿವಿಲ್ಲದಂತೆ ಬದುಕಿ
ತಮ್ಮಿಷ್ಟದಂತೆ ಅದೆಷ್ಟೋ ದೂರ
“ಆಹಾ! ಅದೆಂತಹ ಮಾಯಾಲೋಕ”
ಎಲ್ಲೆಲ್ಲೂ ಮಿನುಗುಮಿಂಚು
ಕಳೆದರೂ ಸಾವಿರ ಜ್ಯೋತಿರ್ವರ್ಷಗಳು
ಕಂಗೊಳಿಸುತ್ತ ಸತ್ತಮೇಲೂ ಅವುಗಳು
ಮಿರಿಮಿರಿ ಮಿನುಗುವಾಗ
ನನ್ನದೇ ಆ ಬೀರುವಿನ ಮಧ್ಯೆ
ನಾನ್ಯಾಕೆ ಕೈ ಹಾಕಲಿ? ಊಹುಂ,
ನನ್ನ ಸ್ವತ್ತೆಲ್ಲ ನನಗೆ ಮಾತ್ರ ಸೇರಿಲ್ಲ

ತಡೆಯುವುದೇ ಕಳೆವ ಕಾಲವ
ಗೋಡೆಗಂಟಿಸಿದ ಗಡಿಯಾರ
ತಿರುಗುವ ಮುಳ್ಳೆರಡು ಅನಾಮತ್ತಾಗಿ
ವೃತ್ತ ಪರಿಧಿಯ ಸುತ್ತ

ಕಂಡ ಕೆಲ ಕನಸುಗಳು
ಮನಸು ತೊಟ್ಟ ಪಾತ್ರಗಳು
ಅವೆಲ್ಲ ಹಾಗೆಯೇ ಇವೆ
ಭದ್ರವಾಗಿ ಬೀರೂವಿನ ಮಧ್ಯಮೂಲೆಯಲ್ಲಿ
ನನ್ನ ಸ್ವತ್ತೆಂಬ ಮಾತ್ರಕ್ಕೆ
ಎಲ್ಲ ನನ್ನದಾಗುವುದಿಲ್ಲ
ಬೇಕೆನಿಸಿದಾಗೆಲ್ಲ ಮನದೊಳಗೆ
ಕೈ ಹಾಕುವುದಿಲ್ಲ

ನನ್ನ ಮಾತ್ರದ್ದೇ ಈ ಕವನ
ನಾ ಬರೆದ ಮಾತ್ರಕ್ಕೆ?
ಬೇಕೆನಿಸಿದಾಗ ಮುದ್ದಿಸಿ ಮುತ್ತಿಕ್ಕಿ
ಇಲ್ಲದಿರೆ ಬೆಂಕಿಗಿಟ್ಟು ಸುಡಲು
ನಾ ಬರೆವುದೆಲ್ಲ ನನ್ನದಷ್ಟೇ ಸ್ವತ್ತೇ?

ಇಲ್ಲ, ಅವೆಲ್ಲ ಹಾಗೆಯೇ ಇರಲಿ
ಆ ಸಾಲುಗಳೆಲ್ಲ ಅಲ್ಲಿಯೇ ಇರಲಿ
ಬೀರುವಿನೊಳಗೆ ಸದ್ದಿಲ್ಲದೇ.
ಬೇಕೆಂದರೆ ಜೀವ ತಳೆದು
ತಾವಾಗಿಯೇ ಹೊರಗೆದ್ದುಬರಲಿ!

ನಾ ಬರೆದ ಸಾಲುಗಳೆಲ್ಲ ಹಾಗೆಯೇ ಇರಲಿ
ಗಂಟು ಕಟ್ಟಿಟ್ಟ ಹಾಳೆಗಳ ನಡುನಡುವೆ
ಕನವರಿಕೆಯ ಕನಸೊಳಗೆ
ತಮ್ಮಷ್ಟಕ್ಕೇ ತಾವ್ ಕಥೆಯ ಕಟ್ಟುತ್ತಾ!


******


---  [27-05-2012]