Friday, January 23, 2015

ಮನಸಲ್ಲೇ ಮುಳುಗುವ ಸೂರ್ಯ



ಮನಸಲ್ಲೇ ಮುಳುಗುವ ಸೂರ್ಯ

ಕತ್ತಲಲ್ಲಿ ಕೂರಲು ಜ್ಞಾನವಲ್ಲ ಕಣಾ
ಧೈರ್ಯಬೇಕು
ಹೆಣಸುಡಲು ಮಸಣವೇ ಬೇಕು
ಬೂದಿ ಹಾರಿಹೋಗಲು ಗಾಳಿಬೇಕು

ಬಾವಿಯೊಳಗಣ  ಕುಬ್ಜಕಾಯ
ಹಾವು ಮೊಸಳೆಗಳ ನಡುನಡುವೆ
ಕೂತು ಕತ್ತೆತ್ತಿ ದಿಟ್ಟಿಸುವುದು
ಹತಾಶೆಯಲ್ಲ ಜಾಣಾ ಹಂಬಲ

ಹತ್ತಂತಸ್ತಿನಿಂದ ಕೆಳಗೂ ಮೇಲೂ
ನೋಡೇ ತೀರುವ ನಾನುಗಳು
ನಡುವಲ್ಲೇ ಮರೆಯಾಗುವುದೂ
ದೃಷ್ಟಿತಲುಪುವ ಮೊದಲೇ
ಭವಿಷ್ಯತ್ ಭೂತವಾಗುವುದೂ
ರೆಕ್ಕೆ ಬಿಟ್ಟ ಪುಕ್ಕದಷ್ಟೇ ಸಹಜ
ತೆಪ್ಪಗೆ ಮೈಕಳಚಿ ತಂಪಾಗಿ ತೇಲಲು
ತನುವಲ್ಲ ತಮ್ಮಾ
ಕನಸಿಗೆ ತೆರೆದಿಟ್ಟ ದಿಟ್ಟ ಮನಸು ಬೇಕು

ಗೋಡೆಗಳ ತಂದೊಡ್ಡಿ ಮೈಮರೆತ ನಾವು
ಬಾಗಿಲಿಗೂ ಜಾಗ ಬಿಡಲಿಲ್ಲವೇ?
ಖಾಲಿ ಹಾದಿಗೆ ಹೀಗೆ ಅಣೆಕಟ್ಟು ಕಟ್ಟಿ
ತೆನೆ ಸೊಂಪಾಗಿ ಬರಲು ಕಾಯ್ದಿರುವೆವೇ?

ಮನಸಲ್ಲೇ ಮುಳುಗುವ ಸೂರ್ಯ
ಬಳಲಿ ಬೆಂಡಾಗಲು ಒಂದಿಡೀ ದಿನವಲ್ಲ
ಮನುಜಾ ಅರೆಕ್ಷಣ ಸಾಕು!


--- 23/01/2015

Thursday, January 8, 2015

ಪಂಚಾಂಗ (ಕವನ)



ಪಂಚಾಂಗ

ಹೊಸವರ್ಷಕ್ಕೊಂದು ಪಂಚಾಂಗ ಬಂದಿದೆ
ಕೊಳ್ಳುವವರಿಗೆ ಮಾತ್ರ
ಹೊಸಮಾದರಿಯ ಹೊಸ ಪಂಚಾಂಗ
ಕೊಂಡವರಿಗೆ ಒಂದು ಥರ
ಕೊಳ್ಳದವರಿಗೊಂದು ಥರ
ಕೊಂಡವರಿಗೆ ಹೊಸವರ್ಷ
ಹರ್ಷದೋತ್ಕರ್ಷ*
ಕೊಳ್ಳದವರಿಗೆ…
ನೋಡಿ ಯೋಚಿಸಿ ಇನ್ನೊಮ್ಮೆ
ಕೊಳ್ಳಿ, ಬೆಲೆ ಕಾಸಷ್ಟೇ ಅಲ್ಲ
ನಿಮ್ಮ ಸಮಯ ಕೂಡ!

ಗುಣಿಸಿ ಭಾಗಿಸಿ ಸಾವಿರ ವರುಷ
ಅರಿತಿದೆ ಪಂಚಾಂಗ ನಿಮ್ಮೆಲ್ಲರ ಮನಸ
ಮೂರು ಅಂಶಗಳ ಸೂತ್ರ ಸಿದ್ಧ
ನಿನ್ನೆಯೆಂಬುವ ನನಪು
ಇಂದೆನ್ನುವ ತವಕ
ನಾಳೆಯೆಂಬೋ ಭಯ
ಕೊಳ್ಳಿ, ಕೊನೆಗ್ಯಾಕೆ ಮರುಕ
ಜೀವನಸಾರ ಪುಟಗಳಲೇ ಇರುವಾಗ!
ಇದೇ ಪಂಚಾಂಗ, ಕೂಡಿ ಕಳೆದು ಕಾಸ
ಕೊಟ್ಟಿದೆ ಕೊಂಡವನಿಗೆ ಬದುಕ*

ಹೊಸಮಾದರಿಯ ಪಂಚಾಂಗ
ಕೊಂಡವರಿಗೆ ಒಂದು ಥರ
ಕೊಳ್ಳದವರಿಗೊಂದು ಥರ
ಕೊಳ್ಳಿ, ಬೆಲೆ ಕಾಸಷ್ಟೇ ಅಲ್ಲ
ನಿಮ್ಮ ಸಮಯ ಕೂಡ!

*ನಾ ಮಾರುವವ ಮಾತ್ರ
ಬರೆದವನ ಕುರುಹಿಲ್ಲ!

                                          -- 08-01-2015

Wednesday, November 19, 2014

ಉತ್ಸಾಹಿಗಳಿಂದ ಏನೋ ಒಂದು ಪ್ರಯತ್ನ.... ನೋಡಿ - " 3 Boxes" ಹತ್ತು ನಿಮಿಷದ ಸಣ್ಣಸಿನೆಮಾ... :)
Click here to watch "3 Boxes" ... a Kannada short film..
"ಬರೆದವನನ್ನೇ ಕೆಣಕಲು ಬಂದ ಕೆಲ ಕಥೆಗಳನ್ನು ಅವುಗಳಿಗೇ ತಿಳಿಯದಂತೆ ಕಟ್ಟಿ ಕೂಡಿಹಾಕಿದ್ದೇನೆ. ಮುಂದೊಮ್ಮೆ ಅವು ತಿಳಿದು ಕೂಗಬೇಕು, ಆಗ ಕನಿಕರ ಬಂದರೆ ಬಿಚ್ಚುತ್ತೇನೆ."

Wednesday, October 22, 2014

ಇಂದು ದೀಪಾವಳಿ, ನಾಳೆ?!

ಕೇಳಲು ಸಾಧ್ಯವಾಗದಿದ್ದರೂ
ಅದು ಹಾಡ ಹೊರತು
ಬೇರಲ್ಲವೆಂಬುದು ಅರಿವಾಗುತ್ತಿದೆ
ಅದು ಕಂಗಳ ಹಾಡು
ಕಾಣದ ಸಾಲುಮನಗಳ ಕಾಡು

ಗುಬ್ಬಚ್ಚಿಯಿಲ್ಲದಿರುವಿಕೆಯಲ್ಲೂ
ಅದು ಗೂಡ ಹೊರತು
ಬೇರಲ್ಲವೆಂಬುದು ಅರಿವಾಗುತ್ತಿದೆ
ಅದು ಗಾಳಿಯ ಗೂಡು
ನಿರಾಧಾರ ಕಣಗಳ ಮಾಡು

ನಿಜ, ಇಂದು ದೀಪಾವಳಿ
ಎಲ್ಲೆಲ್ಲೂ ಬೆಳಕಿನದೇ ಹಾವಳಿ
"ಬೆಳಕೇ, ನಿನಗೆ ಆಶ್ರಯದಾತರಾರು?
ನಾನೋ, ಆ ಮಣ್ಣ ಹಣತೆಯೋ?"
ಕತ್ತಲು ಕೇಳಿದ ಪ್ರಶ್ನೆಗೆ
ಬೆಳಕೇ ಮಬ್ಬಾಗಿದೆ!

ಬೆಳಕಿನಂತೆಯೇ ಕವಿತೆ
ಕೆಳಕೆಳಗೆ ಬಂದರಂತೂ ಹಣತೆಯಂತೆ
ಕರಗಿಕರಗಿ ಮನದಮೂಲೆಯ ಸುಡುತಿದೆ
ಅಕ್ಷರಗಳು ಜಾಡುಹಿಡಿದು
ಮತ್ತದೇ ಗೂಡ ಸೇರುತಿವೆ
ಕೇಳಲಾಗದ ಹಾಡ
ಮತ್ತೆ ಮತ್ತೆ ಹಾಡುತಿವೆ
ಶಕ್ತಿಗುಂದಿಯೂ ಬಿಡದೇ ಕೆಣಕುತಿವೆ-
"ಇಂದು ದೀಪಾವಳಿ, ನಾಳೆ?!"


                           --- 28-10-2008


Wednesday, March 19, 2014

ಸ್ಥಾನಪಲ್ಲಟ




ಸ್ಥಾನಪಲ್ಲಟ


ಕಾಲಿಗೆ ಕಟ್ಟಿದ್ದ ಪಟ್ಟಿ ತೆಗೆದು
ಕಣ್ಣಿಗೆ ಕಟ್ಟಿ ಬಿಟ್ಟಿದ್ದಾರೆ
ಇಗೋ ನಿನ್ನ ಸ್ವಾತಂತ್ರ್ಯ, ನಿನ್ನಿಚ್ಛೆ
ನಿನ್ನೆ ತನಕ ನೆಲಕಚ್ಚಿ ನಿಂತಿದ್ದ ಕಾಲು
ತಳಬಿಟ್ಟು ಹಾರಿದೆ ಹೌಹಾರಿದೆ
ಕಟ್ಟಿಟ್ಟ ಕಣ್ಣಪಟ್ಟಿಗೂ
ನೆಗೆದಿಟ್ಟಿರುವ ಕಾಲ ಹೆಜ್ಜೆಗೂ
ನನ್ನೀ ಇರುವಿಕೆಯೆಂಬುದಿದೆಯಲ್ಲಅಷ್ಟೇ ಅಂತರ!

ಓಟ ಪ್ರಾರಂಭ  
ಎಲ್ಲಿಗೆ? ಎಲ್ಲೆಲ್ಲಿಗೋ
ಸ್ವಾತಂತ್ರ್ಯಕ್ಕೆ ಸತ್ಯವೊಂದೇ  ಸರಹದ್ದು
ಬಿಟ್ಟಾಗ  ಓಡಿಬಿಡಬೇಕು
ಕಾಲೆಂದಿದೆ  ನೀನೆಂದರೆ ನಾನೇ, ನಡೆ ಮುಂದೆ
ತನಗೇನೂ ಕಾಣದ ಕಣ್ಣು  ಕೇಳಿದೆ
ನೀ ಯಾರು? ನೀ ಯಾರು?”
ನಾನೆಂಬುದು ಯಾವುದೀಗ?
ಬಿಟ್ಟಿರುವ ಕಾಲೋ? ಕಟ್ಟಿರುವ ಕಣ್ಣೋ?

ಸ್ವಾತಂತ್ರ್ಯಪಟ್ಟಿ ತೆಗೆದೊಡನೆ
ಸುಟ್ಟು ಬೂದಿಯಾಗುವುದಿಲ್ಲ
ಸ್ಥಾನಪಲ್ಲಟವಾಗುತ್ತದಷ್ಟೇ
ನನ್ನದೇ ಇರಬಹುದು ಕಾಲು-ಕಣ್ಣೆರಡೂ
ಬೆಸೆಯಲಿ ಹೇಗೆ ಈಗೆಲ್ಲ
ನಾನೆಂದರೇನೆಂಬುದೇ ಪ್ರಶ್ನೆಯಾಗುಳಿದಿರುವಾಗ

ಕಳೆದ ಸ್ವಾತಂತ್ರ್ಯದ ಕಣ್ಣಹನಿ
ಕಾಲ ಸವೆದ ವೇಗದೋಟ
ನಡುವೆ ನಿಂತ ನನ್ನತನ

ಅಹೋ! ಅಹೋ!
ಕಣ್ಣಿದ್ದೂ ಕುರುಡಾದವರು ಓಟಕ್ಕಿಳಿದಿದ್ದಾರೆ
ನೆಲಕಚ್ಚಿ ನಿಂತವರೆಲ್ಲ ಸರಿದು ನಿಲ್ಲಿ!
ನಾಳೆ ನಿಮ್ಮ ಸರದಿ
ಕೊಟ್ಟಿರುವ ಪಟ್ಟಿ ಕೈಲಿ ಹಿಡಿದು ತನ್ನಿ!

                                               -- 19 -03 -2014