Wednesday, March 8, 2017

ಆರದ ದೀಪ


ನಿಂತುಬಿಟ್ಟ
ಎಲ್ಲಿ ಏಕೆ ಹೇಗೆ ನೆನಪಿಲ್ಲ
ಬಿದ್ದ ಮಳೆಗೆ ಬೇರು
ತಂಪಾಗಿಹೋಯಿತಿರಬೇಕು
ಸೇವಿಸಿರಬೇಕು ದೇಹ
ಸಾಕಷ್ಟು ಗಾಳಿ
ಅನಿಸಿರಬೇಕು
ಮತ್ತೇಕೆ ಇನ್ನೇಕೆ
ನಿಂತುಬಿಟ್ಟ
ಕತ್ತೆತ್ತಿ ಹೇಳಿದ್ದ ಅಂದೇ
‘ಲೇಖನಿಗಿನ್ನೆಷ್ಟು ತುಂಬಲಿ ಶಾಯಿ
ಮುಖಕಿನ್ನೆಷ್ಟು ಬಳಿಯಲಿ ಬಣ್ಣ
ನೋಯ್ದಿದೆ ಮನವೆಲ್ಲ
ಇನ್ನೆಷ್ಟು ಕಣ್ಣರಳಿಸಿ ನೋಡಲಿ ನಾ’
ಸುತ್ತಿರುವ ವೃತ್ತಪರಿಧಿಯ ಸುತ್ತ
ಹಿಂದೆಯೂ ಮುಂದೆಯೂ
ಎಡಕ್ಕೂ ಬಲಕ್ಕೂ ಚಲಿಸದೇ
ನಿಂತುಬಿಟ್ಟ ಹಾಗೇ
ತಿರುಗೇ ತಿರುಗುವ
ಭೂಮಿಯ ಮೇಲೆ
ಸವೆದ ಹೆಜ್ಜೆಗೇನು ಬೆಲೆ
ಅಕಾರಣ ಇನ್ನೆಷ್ಟು ನಡೆಯಲಿ
ಎಂದೋ ಏನೋ
ನಿಂತಲ್ಲೇ ಕಣ್ಮುಚ್ಚಿ ಕುಸಿದುಹೋದ
ಲೇಖನಿಯ ಮುಚ್ಚಳಿಕೆಯಿನ್ನೂ
ತೆರೆದಿರುವಾಗಲೇ

(08-03-2017)