Wednesday, June 14, 2017

ನಾ ಮಾತ್ರ ಬದಲಾದೆ!

ನನಗೆ ಇಷ್ಟೇ ಇಷ್ಟು
ಚೂರು ಸಾಕು ಎಂಬ
ಮನದ ಖಯಾಲಿ
ಬಚ್ಚಲ ಮನೆಯ ಹಂಡೆ-
ನೀರು ಬಿಸಿಯಾಗುವ
ಮೊದಲೇ ಬೆಂಕಿನಂದಿಸಿ
ಮರೆಯಾಗಿಹೋಗಿತ್ತು
ನಿನ್ನೆ ರಾತ್ರಿ ಮಾತ್ರ ಹೊಯ್ದ
ಮಳೆ ಮನೆಯಂಗಳದ
ತುಳಸೀಗಿಡದ ಬೇರಿಗೆ ಒಂದೇ-
ಒಂದು ಹನಿ ಮುಟ್ಟಿಸುವ
ಮೊದಲೇ ಘಳಿಗೆ
ಬೀಸಿದ ಗಾಳಿಗೆ
ಗಿಡ ಕಿತ್ತು ನೆಲಕ್ಕೂರಿತ್ತು.
ಹಗಲೆಲ್ಲ ಹೆಣಗಾಡಿ ಹಾರುತ್ತ
ಕೆಂಪು ಸೂರ್ಯನ ಪಕ್ಕ
ಹಕ್ಕಿ ಹೆಕ್ಕಿ ತುತ್ತ ಜೊತೆಗೆ
ತವರ ಸೇರುವ ಮೊದಲೇ
ಇದ್ದ ಮೂರು ಮರಿಗಳಲ್ಲಿ
ಒಂದು ಹಸಿದ ಹೊಟ್ಟೆ ಬಿರಿದು
ಸ್ರಾವ ಸೋರಿತ್ತು
ಮತ್ತೆರಡು ಮಾಯವಾಗಿತ್ತು
ಇಷ್ಟೇ ಇಷ್ಟು ಚೂರು ಸಾಕು
ಎಂಬ ಸಂಯಮ
ಸತ್ತು ಮತ್ತೆ ಹುಟ್ಟಿ
ನೆಲವ ತಟ್ಟಿ ನಡೆವ ಮೊದಲೇ
ಮತ್ತೆ ಮತ್ತೆ ಬೇಕು
ಹೆಚ್ಚು ಹೆಚ್ಚು ಬೇಕು ಎಂಬ
ತವಕ ಮನೆಯಮಾಡಿತ್ತು
ಅದೇ ಹಳೆಯ
ಬಚ್ಚಲುಮನೆಯ ಪಕ್ಕ
ಅದೇ ತುಳಸೀಗಿಡದ
ಮುರಿದ ಕೊಂಬೆಯ ಕಡ್ಡಿ
ಹಿಡಿದು ಅದೇ ಹಕ್ಕಿ
ಗೂಡ ಬುಡವ ಗಟ್ಟಿಮಾಡಲು
ಹಾರಿಹೋಯಿತು
ನನಗೂ ಗಿಡಕ್ಕೂ ಹಕ್ಕಿಗೂ
ಬಚ್ಚಲುಮನೆಗೂ ಈಗ
ವರ್ಷ ಸಾವಿರವಾಯಿತು


(14-06-2017)